ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ

ನೇರ ಹಾಗೂ ದಿಟ್ಟ ಮಾತಿನ ಶ್ರೀ. ಗೋಪಾಲ ಹೆಗಡೆ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಬೆಳವಣಿಗೆಯಲ್ಲಿ ಶ್ರಮಿಸಿದ ಮಹನೀಯರಲ್ಲಿ ಒಬ್ಬರು. "ಸ್ವ್ಯಾಬ್" ತನ್ನ 35ನೇ ವರ್ಷದ ಸಂಭ್ರಮದಲ್ಲಿ ಇರುವ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಅಗತ್ಯವಾಗಿದೆ.

"ಸ್ವ್ಯಾಬ್" ವಿವಿಧ ಪದಾಧಿಕಾರಿ ಸ್ಥಾನಗಳಲ್ಲಿ ಇದ್ದು ಅವರು ಈ ನಮ್ಮ ಕ್ರೀಡಾ ಬರಹಗಾರರ ಸಂಘದ ಬೆಳವಣಿಗೆಗೆ ತಮ್ಮ ಶ್ರಮದ ಬೆವರು ನೀರನ್ನು ಎರೆದಿದ್ದಾರೆ. ಈ ಸಂಘದ ನೆನಪುಗಳ ಬುತ್ತಿಯನ್ನು ಬಿಚ್ಚಿದರೆ ಗೋಪಾಲ ಹೆಗಡೆ ಅವರು ಪಟ್ಟಿರುವ ಶ್ರಮ ಎಷ್ಟೊಂದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

"ಸಹಕಾರ"-"ಅಸಹಕಾರ" ಏನೇ ಇರಲಿ; ತಾವು ಅಂದುಕೊಂಡದ್ದನ್ನು ಮಾಡಿ ತೋರಿಸುವ ಛಲವನ್ನು ತೋರಿದವರು ಗೋಪಾಲ ಹೆಗಡೆ. ಅವರ ನೇರ ಮಾತುಗಳ ಕೆಲವೊಮ್ಮೆ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗೆಂದು ಅವರೆಂದೂ ತಮ್ಮ ದಿಟ್ಟ ನುಡಿಯನ್ನು ಹಿಂದಕ್ಕೆ ತೆಗೆದುಕೊಂಡವರಲ್ಲ. ಅವರ ದಿಟ್ಟ ಮಾತುಗಳು ಸ್ವ್ಯಾಬ್ ಹಿತಕ್ಕಾಗಿ ಆಡಿದವಾಗಿರುತ್ತಿದ್ದವು. ಆದ್ದರಿಂದ ಅವರು ತಮ್ಮ ನಿರ್ಣಯಗಳಿಗೆ ಅಂಟಿಕೊಂಡು ಗಟ್ಟಿಯಾಗಿ ನಿಂತವರು.

ಎಂಬತ್ತು ಹಾಗೂ ತೊಂಬತ್ತರ ದಶಕದಲ್ಲಿ ಗೋಪಾಲ ಹೆಗಡೆ ಅವರು ಕ್ರೀಡಾ ಬರಹಗಾರರ ಸಂಘದ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ವೃತ್ತಿ ಚಟುವಟಿಕೆಗೆ ಒಂದಿಷ್ಟೂ ತೊಡಕಾಗದಂತೆಯೇ ಅವರು ಸ್ವ್ಯಾಬ್ ಚಟುವಟಿಕೆಗಳಿಗೂ ಸಮಯವನ್ನು ವಿನಿಯೋಗಿಸಿದವರು.

ಆದ್ದರಿಂದಲೇ ನಾನಿಲ್ಲಿ ಒಬ್ಬ ಹಿರಿಯ ಕ್ರೀಡಾ ಪತ್ರಕರ್ತರು ಗೋಪಾಲ ಹೆಗಡೆ ಅವರ ಬಗ್ಗೆ ಆಡಿದ ಮಾತನ್ನು ಸ್ಮರಿಸಲು ಇಷ್ಟಪಡುತ್ತೇನೆ. "ಗೋಪಾಲ ಅಂದರೆ ಅವನು ಯಾವುದೇ ಕೆಲಸದಲ್ಲಿ ದೈತ್ಯ. ಎಲ್ಲವನ್ನೂ ಮಾಡಿ ಮುಗಿಸುತ್ತಾನೆ. ತಾನು ಅಂದುಕೊಂಡಿದ್ದನ್ನು ಮುಗಿಸುವವರೆಗೆ ಅವನು ನಿಲ್ಲುವುದೇ ಇಲ್ಲ; ಆ ಕೆಲಸ ಮುಗಿಯುವವರೆಗೆ ಚಡಪಡಿಸುತ್ತಾನೆ. ಒಮ್ಮೆ ಆ ಕೆಲಸ ಮುಗಿದ ಮೇಲೆ ಮತ್ತೊಂದರ ಬೆನ್ನು ಹತ್ತುತ್ತಾನೆ" ಎಂದು ಆ ಹಿರಿಯ ಕ್ರೀಡಾ ಪತ್ರಕರ್ತರು ಹೇಳಿದ್ದರು.

ನಿಜವಾಗಿಯೂ ಈ ಮಾತು ಗೋಪಾಲ ಹೆಗಡೆ ಅವರ ಕಾರ್ಯದಕ್ಷತೆ ಹಾಗೂ ಕೆಲಸ ಮಾಡುವ ಉತ್ಸಾಹವನ್ನು ಬಿಂಬಿಸುತ್ತದೆ. ಸ್ವ್ಯಾಬ್ ಬಗ್ಗೆ ಈಗಲೂ ಕಳಕಳಿಯಿಂದ ಮಾತನಾಡುತ್ತಾರೆ ಹೆಗಡೆ ಅವರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿ ಹೋದರೂ, ಅವರು ಸ್ವ್ಯಾಬ್ ಚಟುವಟಿಕೆಗಳ ಜೊತೆಗೆ ತಮ್ಮ ನಂಟು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡಿದ್ದಾರೆ. ಈಗಲೂ ಸ್ವ್ಯಾಬ್ ವಿಷಯವನ್ನು ಎತ್ತಿದರೆ ಹಲವಾರು ಇತಿಹಾಸದ ಪುಟಗಳನ್ನು ತೆರೆದಿಡುತ್ತಾರೆ.

ಸ್ವ್ಯಾಬ್ ಕ್ರೀಡಾ ಚಟುವಟಿಕೆ ಆಯೋಜಿಸಿದ್ದಾಗಲೆಲ್ಲ ಮುಂಚೂಣಿಯಲ್ಲಿ ಇರುತ್ತಿದ್ದವರೇ ಗೋಪಾಲ ಹೆಗಡೆ. ಅವರ ಉತ್ಸಾಹವು ನಮ್ಮಂಥ ಯುವಕರಿಗೆ ಮಾದರಿ ಆಗುವಂಥದು. ಹೆಗಡೆ ಅವರಲ್ಲಿನ ಒಂದು ಗುಣ ಮೆಚ್ಚುವಂಥದು; ಅದು ಅವರ ನೇರ ಮಾತು. ಮನದಲ್ಲಿ ಏನನ್ನು ಮರೆಮಾಡುವುದಿಲ್ಲ. ಅವರ ಈ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗಿರದೆಯೂ ಇರಬಹುದು. ಆದರೆ ಅಂಥದೊಂದು ಗುಣ ಎಲ್ಲರಲ್ಲಿಯೂ ಅಗತ್ಯ. ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಎಲ್ಲರನ್ನೂ ನೇರವಾಗಿ ಎದುರಿಸಿ, ಮಾತನಾಡಿ ದಿಟ್ಟತನ ತೋರುವುದು ಒಳ್ಳೆಯದು.

ಒಂದು ಒಳ್ಳೆಯ ಕೆಲಸ ಆಗಬೇಕು ಎಂದರೆ ಗೋಪಾಲ ಹೆಗಡೆ ಅವರಂತೆ ದಣಿಯದ ಉತ್ಸಾಹದಿಂದ ಹಾಗೂ ದಿಟ್ಟತನದಿಂದ ಕೆಲಸ ಮಾಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ. ಆಗಲೇ ಅನೇಕ ಸವಾಲುಗಳನ್ನು ಮೀರಿ ಒಳಿತಾಗುವ ಕೆಲಸವೊಂದನ್ನು ಮಾಡಲು ಸಾಧ್ಯವಾಗುತ್ತದೆ. ಅಂಥದೊಂದು ಸಾಧ್ಯತೆಯ ಮಾರ್ಗವನ್ನು ತೋರಿಸಿಕೊಟ್ಟವರು ಗೋಪಾಲ ಹೆಗಡೆ.

ತಮ್ಮ ಪ್ರಯೋಜನಕ್ಕೆ ಸ್ವ್ಯಾಬ್ ಅಲ್ಲ; ಸ್ವ್ಯಾಬ್ ಕೆಲಸಕ್ಕಾಗಿ ತಾವು ಎನ್ನುವಂಥ ಗುಣದೊಂದಿಗೆ ತಮ್ಮ ಬೆವರು ಹನಿಗಳ ಅಚ್ಚನ್ನು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಇತಿಹಾಸದ ಪುಟಗಳಲ್ಲಿ ಮೂಡಿಸಿದ್ದಾರೆ ಗೋಪಾಲ ಹೆಗಡೆ. 35ನೇ ವರ್ಷದ ಸಂಭ್ರಮದಲ್ಲಿರುವ "ಸ್ವ್ಯಾಬ್" ಇತಿಹಾಸದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿದ ಗೋಪಾಲ ಹೆಗಡೆ ಅವರಿಗೆ ಧನ್ಯವಾದಗಳು.

-ಡಿ.ಗರುಡ