"ಸಿಟಿಜನ್ ಜರ್ನಲಿಸ್ಟ್"

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಪದವೇ "ನಿಮ್ಮೊಳಗೂ ಒಬ್ಬ ಪತ್ರಕರ್ತನಿದ್ದಾನೆ" ಎಂದು ಪ್ರತಿಯೊಬ್ಬರಿಗೂ ತಿಲಿಸುವಂಥ ವಿಶೇಷವಾದ ಒಳ ಅರ್ಥವನ್ನು ಹೊಂದಿದೆ. ಎಲ್ಲರೂ ಪತ್ರಕರ್ತರಾಗಬಹುದು. ಆದರೆ ಪರಿಣತಿಯ ಅಂತರ ಇರಬಹುದು. ವೃತ್ತಿಪರ ಹಾಗೂ ನಾಗರಿಕ ಪತ್ರಕರ್ತರ ನಡುವೆ ಇರುವ ಅಂತರ ಮಾತ್ರ ಇಷ್ಟೇ ಆಗಿರುತ್ತದೆ. ಆದರೆ ನಾಗರಿಕ ಪತ್ರಕರ್ತರೂ ವೃತ್ತಿಪರರಂತೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಲು ಖಂಡಿತ ಸಾಧ್ಯ ಅಂಥದೊಂದು ಸಾಧ್ಯತೆಗೆ ಅವಕಾಶ ಮಾಸಿಕೊತ್ತಿದ್ದೆ "ಸಿಟಿಜನ್ ಜರ್ನಲಿಸಂ" ಅಥವಾ "ಸಿಟಿಜನ್ ಜರ್ನಲಿಸ್ಟ್" ಎನ್ನುವ ಪರಿಕಲ್ಪನೆ.

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಕಲ್ಪನೆ ಭಾರತೀಯ ಮಾಧ್ಯಮಕ್ಕೆ ಪರಿಚಯವಾಗಿ, ಅದರಲ್ಲಿ ಜನರೂ ತೊಡಗಿಕೊಂಡಿದ್ದು ಕಳೆದ ಒಂದೆರಡು ವರ್ಷಗಳಲ್ಲಿ. ಹೀಗಾಗುವುದಕ್ಕೆ ಕಾರಣ ದೃಶ್ಯಮಾಧ್ಯಮಗಳು ಹೆಚ್ಚು ಕ್ರಿಯಾಶೀಲವಾಗಿದ್ದು. ಆದರೆ ಆರ್ಥರ್ ಸಿ ಕ್ಲಾರ್ಕ್ ಹೇಳುವಂತೆ ಹ್ಯಾಮ್ ರೇಡಿಯೋ ಬಳಕೆದಾರ, ಅಂತರಜಾಲದಲ್ಲಿ ಅಭಿಪ್ರಾಯ ಹರಿಬಿಡುವ ಬ್ಲಾಗರ್, ಹಾಗೂ ಇಂದಿನ ಸಮೂಹ ಮಾಧ್ಯಮದ ಜೊತೆ ತಂತ್ರಜ್ಞಾನದ ಅರಿವಿನೊಂದಿಗೆ ಸಂಪರ್ಕ ಹೊಂದುವ ಪ್ರತಿಯೊಬ್ಬನೂ ಸಿಟಿಜನ್ ಜರ್ನಲಿಸ್ಟ್.

ಬ್ಲಾಗರ್, ಮೊಬೈಲ್ ಬಳಕೆದಾರ ಒಂದು ಘಟನೆಯನ್ನು ದಾಖಲಿಸಿ ಅದಕ್ಕೆ ಪ್ರತಿಯಾಗಿ ಅಭಿಪ್ರಾಯಗಳು ಹುಟ್ಟುವಂತೆ ಮಾಡಬಲ್ಲವನಾಗಿದ್ದಾನೆ ಎನ್ನುತ್ತಾರೆ ಆರ್ಥರ್ ಸಿ ಕ್ಲಾರ್ಕ್. ಇತ್ತೀಚೆಗೆ ನಿಧನರಾದ ಆರ್ಥರ್ ಸಿ ಕ್ಲಾರ್ಕ್ ಖ್ಯಾತ ಲೇಖಕ, ಕಾದಂಬರಿಕಾರ. ಇವರು ಬರೆದ ವಿಜ್ಞಾನದ ಕಥೆಗಳು ಕೇವಲ ಕಲ್ಪನೆಯಷ್ಟೇ ಆಗದೆ ಅವರ ಕಣ್ಣಮುಂದೆ ಸಾಕಾರವಾದಂಥವು.

ಸಂಪರ್ಕ ಹಾಗೂ ಸಮೂಹ ಮಾಧ್ಯಮ ಕ್ಷೇತ್ರ ಕುರಿತು ಒಬ್ಬ ವಿಜ್ಞಾನಿಗಿಂತ ಹೆಚ್ಚಾಗಿ ಕನಸು ಕಂಡವರು ಆರ್ಥರ್ ಸಿ ಕ್ಲಾರ್ಕ್. ಅದು ಸಾಕಾರವಾಗಿದ್ದನ್ನು ಕಣ್ಣಾರೆ ಕಂಡವರು. ಮಾಧ್ಯಮ ಕ್ಷೇತ್ರದ ಏಳುಬೀಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಆರ್ಥರ್ ಸಿ ಕ್ಲಾರ್ಕ್ ನಾಲ್ಕು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಸಿಟಿಜನ್ ಜರ್ನಲಿಸ್ಟ್ ಕುರಿತು ಸುದೀರ್ಘ ಲೇಖನವನ್ನು ಬರೆದಿದ್ದರು. ಆ ಲೇಖನವು ಸಿಟಿಜನ್ ಜರ್ನಲಿಸ್ಟ್ ಎಂದರೇನು ಎನ್ನುವುದನ್ನು ತಿಳಿಸುತ್ತದೆ.

2004ರಲ್ಲಿ ಏಷ್ಯಾದಲ್ಲಿ ಆದ ಸುನಾಮಿ ವಿಶ್ವವನ್ನೇ ನಡುಗಿಸಿತು ಎಂದೇ ಬಣ್ಣಿಸಲಾಯಿತು. ಈ ಘಟನೆ ನಡೆದ ಸ್ಥಳಕ್ಕೆ ಸ್ವಲ್ಪ ಹತ್ತಿರದಲ್ಲೇ- ಶ್ರೀಲಂಕಾದಲ್ಲಿ- ನೆಲೆಸಿದ್ದ ಕೆಲವರು ಮಹತ್ವದ ಘಟನೆಗೆ ಸಾಕ್ಷಿಯಾದರು. ರಜೆ ದಿನದ ಸಂಭ್ರಮದಲ್ಲಿದ್ದ ನೂರಾರು ಮಂದಿ ಭೀಕರ ಸುನಾಮಿ ಅಲೆಗಳ ದೃಶ್ಯಗಳನ್ನು ತಮ್ಮ ಹ್ಯಾಂಡಿಕ್ಯಾಮ್‌ನಲ್ಲಿ ಸೆರೆಹಿಡಿದರು. ಅಲ್ಲಿದ್ದವರೆಲ್ಲಾ ದುರದೃಷ್ಟವಶಾತ್ ಒಂದು ಕೆಟ್ಟ ಗಳಿಗೆಯಲ್ಲಿ ಕೆಟ್ಟ ಸ್ಥಳದಲ್ಲಿದ್ದರು. ಆದರೂ ಅವರು ತಮ್ಮ ಕ್ಯಾಮೆರಾ ಎಚ್ಚರವಾಗಿಟ್ಟಿದ್ದರು. ಟಿವಿ ಚಾನೆಲ್‌ನವರು, ವರದಿಗಾರರು ಬರುವ ಹೊತ್ತಿಗೆ ತಡವಾಗಿತ್ತು. ಅವರು ಭೀಕರ ಅಲೆಗಳನ್ನು ಪ್ರತ್ಯಕ್ಷ ಕಂಡು ಸೆರೆಹಿಡಿದವರಿಂದ ಬೇಡಿ ಪಡೆದು ತಮ್ಮ ಟಿವಿಗಳಲ್ಲಿ ಪ್ರಸಾರ ಮಾಡಬೇಕಾಯಿತು. ಈ ಒಂದು ಘಟನೆ ಸಿಟಿಜನ್ ಜರ್ನಲಿಸ್ಟ್ ಮಹತ್ವ ಏನೆಂದು ಸ್ಪಷ್ಟವಾಗಿ ವಿವರಿಸುತ್ತದೆ.

ಸಂವಹನಕ್ಕೆ ತೀವ್ರವಾಗಿ ತುಡಿಯುವ ಪ್ರಭೇದ ನಮ್ಮದು. ಅದೂ ತಾಂತ್ರಿಕವಾಗಿ ಸಾಧ್ಯವಾಗುವುದಾದರೆ ಮತ್ತಷ್ಟು ಬೇಗ ಅದನ್ನು ಸ್ವೀಕರಿಸುತ್ತೇವೆ, ನಮ್ಮದನ್ನಾಗಿಸಿಕೊಳ್ಳುತ್ತೇವೆ. ಆರ್ಥಿಕ, ಕಾನೂನು ಮತ್ತು ರಾಜಕೀಯಗಳಷ್ಟೇ ಇದಕ್ಕೆ ಮಿತಿಗಳಾಗಬಹುದು. ಕಾಲಾನಂತರದಲ್ಲಿ ಅವೂ ಕೂಡ ತೊಡಕಾಗುವುದಿಲ್ಲ. ಆದರೆ ನಮ್ಮ ನೈತಿಕತೆ ಮಾತ್ರ ನಮ್ಮ ಮುಂದೆ ಇದ್ದೇ ಇರುತ್ತದೆ. ಭವಿಷ್ಯದ ಸಂಪೂರ್ಣ ಸಂಪರ್ಕವುಳ್ಳ ಜಗತ್ತನ್ನು ರೂಪಿಸುವುದು ನಮ್ಮ ಕೈಗಳಲ್ಲೇ ಇದೆ ಎನ್ನುವುದನ್ನು ಮಾತ್ರ ಸಿಟಿಜನ್ ಜರ್ನಲಿಸ್ಟ್ ಮರೆಯಬಾರದು.

ನಾವೀಗ ಇರುವುದು ಮಾಧ್ಯಮ ಜಗತ್ತಿನಲ್ಲಿ. ಜಗತ್ತಿನ ಎಲ್ಲ ಪತ್ರಿಕೆಗಳು, ಸುದ್ದಿ ರವಾನಿಸುವ ಅಲೆಗಳು ಸ್ತಬ್ಧವಾಗಿಬಿಟ್ಟರೆ, ನಮ್ಮ ಜಗತ್ತು ಕೂಡ ಸ್ತಬ್ಧ. ಹಾಗಾಗಿ ಸಶಕ್ತ ಸಮಾಜಕ್ಕೆ ಸದಾ ಮಾಹಿತಿ ನೀಡಲು ವಿವಿಧ ರೀತಿಯ ಮಾಧ್ಯಮಗಳು ಬೇಕು. ಅಮೆರಿಕದ ಲೇಖಕ ಎ.ಜೆ. ಲೀಬ್ಲಿಂಗ್ ಹೇಳುತ್ತಾನೆ, ‘ಪತ್ರಿಕಾ ಸ್ವಾತಂತ್ರ್ಯ ಅನ್ನೋದು ಪತ್ರಿಕೆಯನ್ನು ಹೊಂದಿರುವವರದ್ದಾಗಿರುತ್ತದೆ’ ಎಂದು. ಈ ಮಾತಿನಲ್ಲಿ ಅರ್ಥವಿದೆ.

ಇತ್ತೀಚಿನವರೆಗೆ ಇದ್ದ ಪರಿಸ್ಥಿತಿ ಇದು. ಆದರೆ ಅಂತರ್ಜಾಲ ಈಗ ಪ್ರತಿಯೊಬ್ಬರ ಕಂಪ್ಯೂಟರನ್ನು ಒಂದು ಪ್ರಿಂಟಿಂಗ್ ಪ್ರೆಸ್, ಪ್ರಸಾರಕೇಂದ್ರವನ್ನಾಗಿ ಮಾಡಿದೆ. ನಾವೀಗ ಸಂಪರ್ಕ ಮಾಧ್ಯಮದ ಎರಡನೇ ಯುಗಕ್ಕೆ ಕಾಲಿಡುತ್ತಿದ್ದೇವೆ. ಬ್ಲಾಗ್‌ಗಳು, ವಿಕಿಪೀಡಿಯಾ ಮತ್ತು ಸಿಟಿಜನ್ ಜರ್ನಲಿಸ್ಟ್‌ಗಳು ಮುಂಬರುವ ಹೊಸತನದ ಸಂಕೇತಗಳು.

ಬ್ಲಾಗ್ ಬರಹಗಾರರು ಆನ್‌ಲೈನ್‌ನಲ್ಲಿ ತಮ್ಮ ಡೈರಿ ಬರೆಯುವ ಮೂಲಕ ತಮ್ಮ ವೃತ್ತಿ ಮತ್ತು ಸಮಾಜಿಕ ಪರಿಧಿಯಿಂದಾಚೆಗೂ ಪ್ರಭಾವಿಯಾಗಬಲ್ಲರು. ಕೊಲಂಬಿಯಾ ಬಾಹ್ಯಾಕಾಶ ನೌಕೆ ದುರಂತಕ್ಕೀಡಾದಾಗ ಅಸಂಬದ್ಧ ಪತ್ರಿಕಾ ವರದಿಗಳನ್ನು ಖಂಡತುಂಡವಾಗಿ ಟೀಕಿಸಿದ್ದು ಬಾಹ್ಯಾಕಾಶದ ಬಗ್ಗೆ ತಿಳಿದಿದ್ದ ಅನುಭವಿ ಬ್ಲಾಗ್ ಬರಹಗಾರರು ಎನ್ನುವುದನ್ನು ಮರೆಯುವಂತಿಲ್ಲ.

ಸಿಟಿಜನ್ ಜರ್ನಲಿಸಂ ಅನ್ನೋ ಪರಿಕಲ್ಪನೆಯನ್ನು ಶೇನ್ ಬೌಮನ್ ಮತ್ತು ಕ್ರಿಸ್ ವಿಲ್ಲೀಸ್ ಹೀಗೆ ವ್ಯಾಖ್ಯಾನಿಸುತ್ತಾರೆ: ‘ಮಾಹಿತಿ ಸಂಗ್ರಹಿಸುವ, ವರದಿ ಮಾಡುವ, ವಿಶ್ಲೇಷಿಸುವ ಮತ್ತು ಸುದ್ದಿ, ಮಾಹಿತಿಯ ಪ್ರಸಾರದಲ್ಲಿ ಕ್ರಿಯಾಶೀಲ ತೊಡಗುವಿಕೆ’ ಎಂದು.

ಸಿಟಿಜನ್ ಜರ್ನಲಿಸಂ ಉದ್ದೇಶ ಪ್ರಜಾಪ್ರಭುತ್ವ ನಿರೀಕ್ಷಿಸುವಂತೆ ಸ್ವತಂತ್ರ, ವಿಶ್ವಾಸಾರ್ಹ, ನಿಖರ, ಸವಿವರ, ಸಾಂದರ್ಭಿಕ ಮಾಹಿತಿಯನ್ನು ಪೂರೈಸುವುದು. ಇದನ್ನು ನಾವು ಮಾಧ್ಯಮದ ಮುಖ್ಯವಾಹಿನಿಯಿಂದಲೂ ನಿರೀಕ್ಷಿಸುತ್ತೇವೆ. ಸಿಬಿಎಸ್‌ ನ್ಯೂಸ್‌ನಲ್ಲಿ ನಿರೂಪಕನಾಗಿರುವ ವಾಲ್ಟರ್ ಕ್ರಾನ್‌ಕೈಟ್ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಮಾಧ್ಯಮ ಒತ್ತಡವನ್ನು ಎದುರಿಸುತ್ತಿದೆ. ಇಂದು ಸಂಪಾದಕೀಯ ಬಳಗದ ಏಕತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಕಾರ್ಪೋರೇಟ್ ಸೆನ್ಸಾರ್ ಸರ್ಕಾರಿ ಸೆನ್ಸಾರ್ ನಷ್ಟೇ ಅಪಾಯಕಾರಿ. ಹಾಗೆ ಸ್ವಯಂ ಹೇರಿಕೆಯ ಸೆನ್ಸಾರ್ ವಂಚನೆ ಎನ್ನುತ್ತಾನೆ ಮಾಧ್ಯಮ ನಿರೂಪಕ ಕ್ರಾನ್‌ ಕೈಟ್.

ಸಿಟಿಜನ್ ಜರ್ನಲಿಸ್ಟ್‌ಗಳು ಪೂರ್ವಾಗ್ರಹ ಪೀಡಿತರಾಗಿರುವುದಿಲ್ಲ ಎನ್ನುವ ಹಾಗಿಲ್ಲ. ಆದರೆ ಅಸಂಖ್ಯ ಮಂದಿ ಏಕಕಾಲಕ್ಕೆ ಭಾಗಿಯಾಗಿರುವ ವಿಕಿಪೀಡಿಯಾ ಸ್ವಯಂ ತಿದ್ದಿಕೊಳ್ಳುವುದಕ್ಕೆ ಸಾಧ್ಯವಿರುವುದನ್ನು ಸಾಬೀತು ಮಾಡಿದೆ. ಆರಂಭದಲ್ಲಿ ವಿಕಿಪೀಡಿಯಾ "ಆನ್ ಎನ್‌ ಸೈಕ್ಲೋಪಿಡೀಯಾ"ವನ್ನು ಇಂಟರ್ನೆಟ್ ಬಳಕೆದಾರರ ಮಾಹಿತಿಯಿಂದಲೇ ರೂಪಿಸಲಾಯಿತು. ಇದು ಅರೆಸತ್ಯ, ಸುಳ್ಳು ಮಾಹಿತಿಗಳನ್ನು ಹೊಂದಿರುವ ಭಯವಿತ್ತು. ಆದರೆ ಅಧ್ಯಯನಗಳು ಹೇಳುತ್ತವೆ, ಅಂಥ ಯಾವುದೇ ಮಾಹಿತಿಯೂ ಅತಿ ಶೀಘ್ರದಲ್ಲೇ ತಿದ್ದುಪಡಿಯಾಗುತ್ತದೆ ಮತ್ತು ಅಪ್‌-ಡೇಟ್ ಕೂಡ ಆಗುತ್ತದೆ!

ಹಾಗಂತ ಸಿಟಿಜನ್ ಜರ್ನಲಿಸ್ಟ್ ಕಠಿಣವಾದ ಮಾಧ್ಯಮ ಸ್ಪರ್ಧೆಯಲ್ಲಿ ಬದುಕುತ್ತಾನಾ? ಈ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಹೊಸ ಬದಲಾವಣೆ ಮಾಧ್ಯಮದ ಬಳಕೆದಾರನ ಶಕ್ತಿಯನ್ನು ಉಪೇಕ್ಷಿಸುವಂತಿಲ್ಲ.

ಸಿಟಿಜನ್ ಜರ್ನಲಿಸಮ್‌ಗೆ ಇದೊಂದು ಉತ್ತಮ ಉದಾಹರಣೆ: ಕಮರ್ಷಿಯಲ್ ದೃಷ್ಟಿಯಲ್ಲೂ ಯಶಸ್ಸು ಕಂಡ ಮತ್ತು ಉತ್ತಮ ಸಿಟಿಜನ್ ಜರ್ನಲಿಸಂ ಎಂದು ಗುರುತಿಸಿಕೊಂಡಿದ್ದು ದಕ್ಷಿಣ ಕೊರಿಯಾದ www.ohmynews.com; 2001 ರಲ್ಲಿ "ಓಹ್ ಯೊನ್ ಹೊ" ಎಂಬ ಪತ್ರಕರ್ತ ಅಂತರ್ಜಾಲ ಪತ್ರಿಕೆ ಆರಂಭಿಸಿದ. ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತ ಎಂಬುದು ಆತನ ನಿಲುವು.

ಹಾಗಾಗಿ ಆತ ಯಾರು ಬೇಕಾದರೂ ವರದಿ ಮಾಡಬಹುದು ಎಂಬ ಆಹ್ವಾನ ಕೊಟ್ಟ. ಇಂದು ಸಾವಿರಾರು ಮಂದಿ ಈ ವೆಬ್‌ಸೈಟಿಗೆ ಸುದ್ದಿ ಬರೆದು ಕಳಿಸುತ್ತಾರೆ. ಪ್ರತಿದಿನ 7.5 ಲಕ್ಷ ಮಂದಿ ಈ ವೆಬ್‌ಸೈಟಿಗೆ ಭೇಟಿಕೊಡುತ್ತಾರೆ. ಈಗ ಓಹ್‌ಮೈನ್ಯೂಸ್ ವೆಬ್‌ಸೈಟಿನಲ್ಲಿ ಕೇವಲ ೪೦ ಮಂದಿ ಸಿಬ್ಬಂದಿ ಇದ್ದು, ಅವರು ಬರೆಯುವ ಸುದ್ದಿ ವೆಬ್‌ಸೈಟಿನಲ್ಲಿ ಪ್ರಕಟವಾದ ಸುದ್ದಿಗಳ ಐದನೇ ಒಂದು ಭಾಗ ಮಾತ್ರ! ಉಳಿದಿದ್ದು ನಾಗರಿಕರು ಕಳಿಸಿದ್ದು.

ದಕ್ಷಿಣ ಕೊರಿಯ ಅಧ್ಯಕ್ಷ ರೊಹ್ ಮೂ ಹ್ಯೂನ್ ಆಯ್ಕೆಯಲ್ಲಿ ಈ ವೆಬ್‌ಸೈಟ್ ಮಹತ್ವದ ಪಾತ್ರ ವಹಿಸಿತ್ತು. ಚುನಾವಣೆ ನಂತರ ಹ್ಯೂನ್ ಮೊದಲು ಸಂದರ್ಶನ ನೀಡಿದ್ದು ಯಾವುದೇ ಪತ್ರಿಕೆಗಲ್ಲ. ಸಿಟಿಜನ್ ಜರ್ನಲಿಸ್ಟ್‌ಗಳಿಂದ ನಡೆಯುತ್ತಿರುವ "ಓಹ್ ಮೈನ್ಯೂಸ್ ವೆಬ್‌ಸೈಟಿಗೆ! ಇದೇ ವ್ಯಕ್ತಿ ಆರೋಪ ಹೊತ್ತು ನಿಂತಾಗ ನಡೆದ ಪ್ರತಿಭಟನೆಗಳನ್ನು ವಿಸ್ತೃತವಾಗಿ, ಸಚಿತ್ರ ಹಾಗೂ ವಿಡಿಯೋಗಳೊಂದಿಗೆ ವರದಿ ಮಾಡಿದ ಹೆಗ್ಗಳಿಕೆ ಸಿಟಿಜನ್ ಜರ್ನಲಿಸ್ಟ್‌ಗಳದ್ದು.

ನಿಷ್ಕ್ರಿಯವಾದ ಮಾಧ್ಯಮದ ಯುಗ ಅಂತ್ಯದತ್ತ ಸಾಗುತ್ತಿದೆ. ಸಿಜಿಟನ್ ಕೇನ್ ನಿಂದ ಸಿಟಿಜನ್ ಜರ್ನಲಿಸ್ಟ್‌ನತ್ತ ಹೊರಟ ಈ ದಾರಿಯಲ್ಲಿ ಹಿಂತಿರುಗುವ ಮಾತಿಲ್ಲ. ಆದ್ದರಿಂದ ಸಿಟಿಜನ್ ಜರ್ನಲಿಸಂ ಹೊಸ ಯುಗದ "ಮಾಧ್ಯಮ ಶಕ್ತಿ" ಎನ್ನುವುದು ನನ್ನ ಅಭಿಪ್ರಾಯ.

-ಎಂ. ಎ. ಪೊನ್ನಪ್ಪ